top of page

ಆಸ್ಟ್ರೇಲಿಯಾ ಮೀಡಿಯಾ ಪ್ರಕಾರ ವಿರಾಟ್​ ಕೊಹ್ಲಿ ಬಿಟ್ರೆ ಟೀಮ್​ ಇಂಡಿಯಾದ ಹೊಸ ಕಿಂಗ್ ಈತನೇ!​ Team India

  • Writer: new waves technology
    new waves technology
  • Nov 13, 2024
  • 2 min read

ನವದೆಹಲಿ: ಟೀಮ್​ ಇಂಡಿಯಾ ( Team India ) ಕ್ರಿಕೆಟಿಗ ಹಾಗೂ ರನ್ ಮಷಿನ್ ವಿರಾಟ್ ಕೊಹ್ಲಿ ಜನಪ್ರಿಯತೆಯ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ.












ಕೊಹ್ಲಿ, ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಪಾಕಿಸ್ತಾನದಲ್ಲೂ ಅಭಿಮಾನಿಗಳನ್ನು ಹೊಂದಿರುವ ಏಕೈಕ ಭಾರತೀಯ ಕ್ರಿಕೆಟಿಗನೆಂಬ ಹೆಗ್ಗಳಿಕೆ ಹೊಂದಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈಗಾಗಲೇ ಎಂಬತ್ತು ಶತಕ ಪೂರೈಸಿರುವ ಕೊಹ್ಲಿ, ಹಲವು ಅಪರೂಪದ ಸಾಧನೆಗಳೊಂದಿಗೆ ದಾಖಲೆಗಳ ರಾಜನಾಗಿ ಗುರುತಿಸಿಕೊಂಡಿದ್ದಾರೆ.

ಆದರೆ, ಕಳೆದ ಕೆಲ ದಿನಗಳಿಂದ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಅವರು ನಿರೀಕ್ಷಿತ ಮಟ್ಟಕ್ಕೆ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಸಂಪೂರ್ಣ ವಿಫಲರಾದರು. ಒಟ್ಟು ಆರು ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದೇ ಒಂದು ಅರ್ಧಶತಕವನ್ನು ದಾಖಲಿಸಿದ್ದು, ಕೊಹ್ಲಿಯ ಫಾರ್ಮ್ ಕೊರತೆಗೆ ಸಾಕ್ಷಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಟೀಮ್​ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಆಡಲಿದ್ದು, ಎಲ್ಲರ ಕಣ್ಣು ಇದೀಗ ಕೊಹ್ಲಿಯತ್ತ ನೆಟ್ಟಿದೆ. ಏಕೆಂದರೆ, ಆಸೀಸ್ ವಿರುದ್ಧ ಕೊಹ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಹೀಗಾಗಿ ಕಾಂಗರೂ ಬೌಲರ್​ಗಳಿಗೆ ಕೊಹ್ಲಿ ಎಂದರೆ ಭಯ ಕಾಡುತ್ತದೆ. ಹಾಗಾಗಿ, ಆಸ್ಟ್ರೇಲಿಯದ ಮಾಧ್ಯಮಗಳಲ್ಲಿ ಕೊಹ್ಲಿ ಸದ್ಯ ಹೈಲೈಟ್​ ಆಗಿದ್ದಾರೆ.

ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ನವೆಂಬರ್​ 22 ರಿಂದ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಸುದ್ದಿ ಪತ್ರಿಕೆಗಳು ಕೊಹ್ಲಿಯ ಅಂಕಿ-ಅಂಶಗಳನ್ನು ವಿಶ್ಲೇಷಿಸುತ್ತಿವೆ ಮತ್ತು ಕವರ್ ಪೇಜ್‌ಗಳಲ್ಲಿ ಅವರ ಚಿತ್ರಗಳನ್ನು ಪ್ರಮುಖವಾಗಿ ಪ್ರಕಟಿಸುತ್ತಿವೆ. ಕೊಹ್ಲಿಯ ಕ್ರೇಜ್ ನೋಡಿ ಆಸೀಸ್ ಮಾಧ್ಯಮಗಳು ಈ ರೀತಿ ಹೈಲೈಟ್ ಮಾಡಿರುವುದು ಆಶ್ಚರ್ಯವೇನಿಲ್ಲ. ಆದರೆ, ಈ ಬಾರಿ ಕೊಹ್ಲಿ ಜೊತೆಗೆ ಮತ್ತೋರ್ವ ಯುವ ಕ್ರಿಕೆಟಿಗನಿಗೆ ಆಸ್ಟ್ರೇಲಿಯಾ ಮಾಧ್ಯಮಗಳು ಆದ್ಯತೆ ನೀಡಿವೆ. ಅಲ್ಲದೆ, ಆಸೀಸ್ ನಿಯತಕಾಲಿಕೆಗಳು ಕೂಡ ಈ ಯುವ ಕ್ರಿಕೆಟಿಗನ ಫೋಟೋವನ್ನು ಪ್ರಕಟಿಸಿವೆ. ಆ ಯುವ ಕ್ರಿಕೆಟಿಗ ಬೇರೆ ಯಾರೂ ಅಲ್ಲ ಅವರೇ ಯಶಸ್ವಿ ಜೈಸ್ವಾಲ್.


ಹೌದು, ಆಸಿಸ್​ ಮಾಧ್ಯಮಗಳು ಯಶಸ್ವಿ ಜೈಸ್ವಾಲ್​ ಅವರನ್ನು ಟೀಮ್​ ಇಂಡಿಯಾದ ಹೊಸ ರಾಜ ಎಂದು ಹೇಳಿವೆ. ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ದಿನದಿಂದಲೇ ಉತ್ತಮ ಇನ್ನಿಂಗ್ಸ್‌ಗಳ ಮೂಲಕ ಮೋಡಿ ಮಾಡಿರುವ ಮುಂಬೈ ಬ್ಯಾಟರ್‌ ಯಶಸ್ವಿ ಜೈಸ್ವಾಲ್​ಗೆ ಆಸ್ಟ್ರೇಲಿಯಾದ ಮಾಧ್ಯಮಗಳೂ ಆದ್ಯತೆ ನೀಡಿವೆ. ಯಶಸ್ವಿಯನ್ನು 'ನವಂ ರಾಜ' (ಹೊಸ ರಾಜ) ಎಂದು ಸಂಬೋಧಿಸಿವೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಆದರೆ, ಇದನ್ನು ನೋಡಿ ಟೀಮ್​ ಇಂಡಿಯಾದ ಸ್ಟಾರ್ ಆಟಗಾರ ರಿಷಭ್​ ಪಂತ್ ಅಭಿಮಾನಿಗಳು ಬೇಸರಗೊಂಡಿದ್ದಾರೆ.




ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾದ ಕೊನೆಯ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವಿಕೆಟ್ ಕೀಪರ್‌ಗೆ ಸರಿಯಾದ ಆದ್ಯತೆ ನೀಡಲಾಗಿಲ್ಲ ಎಂದು ಪಂತ್​ ಅಭಿಮಾನಿಗಳು ನಿರಾಶೆ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ 2020-21ರ ಪ್ರವಾಸದಲ್ಲಿ ಗಾಬಾ ಟೆಸ್ಟ್‌ನಲ್ಲಿ ಅದ್ಭುತ ಇನ್ನಿಂಗ್ಸ್‌ನೊಂದಿಗೆ (ಔಟಾಗದೆ 89) ಪ್ರಭಾವ ಬೀರಿದ ಪಂತ್, ಭಾರತ 2-1 ರಿಂದ ಸರಣಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇನ್ನು ಜೈಸ್ವಾಲ್ ಇದುವರೆಗೆ 14 ಟೆಸ್ಟ್ ಪಂದ್ಯಗಳನ್ನಾಡಿದ್ದು 1407 ರನ್ ಗಳಿಸಿದ್ದಾರೆ. ಮೂರು ಶತಕ ಹಾಗೂ ಎರಡು ದ್ವಿಶತಕಗಳಿರುವುದು ಗಮನಾರ್ಹ. (ಏಜೆನ್ಸೀಸ್​)


Kommentare


bottom of page