top of page

ಶ್ರೀರಾಮುಲುಗೆ ಆಹ್ವಾನ ನೀಡಿಲ್ಲ, ರೆಡ್ಡಿ ಬಾಯಿ ಚಪಲಕ್ಕೆ ಮಾತನಾಡುತ್ತಿದ್ದಾನೆ; ಪಕ್ಷ ಒಡೆಯಲು ಯತ್ನಿಸುತ್ತಿದ್ದಾನೆ: ಡಿ.ಕೆ ಶಿವಕುಮಾರ್

  • Writer: new waves technology
    new waves technology
  • Jan 24
  • 1 min read

ಆತ ಆ ಪಕ್ಷದಲ್ಲಿಯೇ ಇರಲಿಲ್ಲ. ಈಗ ಆ ಪಕ್ಷಕ್ಕೆ ಕಾಲಿಟ್ಟು, ಆ ಮನೆಯನ್ನೇ ಒಡೆಯುವ ಪ್ರಯತ್ನ ಮಾಡುತ್ತಿದ್ದಾನೆ. ನಾನು ಆತನ ಹೆಸರು ಹೇಳಿ ಅವನನ್ನು ಏಕೆ ದೊಡ್ಡ ಮನುಷ್ಯನನ್ನಾಗಿ ಮಾಡಲಿ?

ಬೆಂಗಳೂರು: ನನಗೆ ಶ್ರೀರಾಮುಲು ಅವರು ಸಿಕ್ಕಿಲ್ಲ. ನನ್ನ ಬಳಿ ಅವರು ಮಾತನಾಡಿಲ್ಲ. ಪಕ್ಷಕ್ಕೆ ಬರುವಂತೆ ಅವರಿಗೆ ಯಾವುದೇ ಆಹ್ವಾನ ನೀಡಿಲ್ಲ. ಈ ವಿಚಾರದಲ್ಲಿ ನನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದ ಬಳಿ ಮಾತನಾಡಿದ ಅವರು, ಆತ ಬಾಯಿ ಚಪಲಕ್ಕೆ ಮಾತನಾಡುತ್ತಿದ್ದಾನೆ. ಆತ ಆ ಪಕ್ಷದಲ್ಲಿಯೇ ಇರಲಿಲ್ಲ. ಈಗ ಆ ಪಕ್ಷಕ್ಕೆ ಕಾಲಿಟ್ಟು, ಆ ಮನೆಯನ್ನೇ ಒಡೆಯುವ ಪ್ರಯತ್ನ ಮಾಡುತ್ತಿದ್ದಾನೆ. ನಾನು ಆತನ ಹೆಸರು ಹೇಳಿ ಅವನನ್ನು ಏಕೆ ದೊಡ್ಡ ಮನುಷ್ಯನನ್ನಾಗಿ ಮಾಡಲಿ? ಆತ ನನ್ನ ಹೆಸರು ತೆಗೆದುಕೊಂಡರೆ ದೊಡ್ಡವನಾಗುತ್ತಾನೆಯೇ? ನಾನು ಸಂಪರ್ಕದಲ್ಲಿ ಇರುವುದನ್ನು ಆತ ನೋಡಿದ್ದಾನೆಯೇ? ಆತನೇ ಯಾರ ಜೊತೆ ಸಂಪರ್ಕದಲ್ಲಿ ಇದ್ದ ಎಂಬುದನ್ನು ಈಗ ಚರ್ಚೆ ಮಾಡುವುದು ಬೇಡ. ನಾನು ಯಾವುದನ್ನು ಬಹಿರಂಗಗೊಳಿಸಲು ಹೋಗುವುದಿಲ್ಲ ಎಂದು ಕಿಡಿಕಾರಿದರು.

ಈ ಹಿಂದೆ ಚುನಾವಣೆಗೆ ಮುಂಚಿತವಾಗಿ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದು ನಿಜ. ಆಗ ಅವರು ಬರುವುದಿಲ್ಲ, ಬಿಜೆಪಿಯಲ್ಲಿಯೇ ಉಳಿದುಕೊಳ್ಳುತ್ತೇನೆ ಎಂದು ಹೇಳಿದ್ದರು. ನಾನು ಆ ರೀತಿ ಸುಮಾರು 50 ಜನಕ್ಕೆ ಕೇಳಿದ್ದೇನೆ ಎಂದು ಹೇಳಿದರು. ಶ್ರೀರಾಮುಲು ಅವರು ಈಗ ಕಾಂಗ್ರೆಸ್ ಪಕ್ಷಕ್ಕೆ ಬರಲು ಒಪ್ಪಿದರೆ ಎಂದು ಪ್ರಶ್ನಿಸಿದಾಗ, ಇದರ ಬಗ್ಗೆ ನಾನೇಕೆ ಸುಮ್ಮನೆ ಯೋಚನೆ ಮಾಡಲಿ ಎಂದರು.

ಕೆಲವು ಸಚಿವರು ಶ್ರೀರಾಮುಲು ಅವರು ಪಕ್ಷಕ್ಕೆ ಬಂದರೆ ಸ್ವಾಗತ ಎಂದು ಹೇಳಿರುವ ಬಗ್ಗೆ ಕೇಳಿದಾಗ, “ನನ್ನ ಮುಂದೆ ಈ ವಿಚಾರ ಪ್ರಸ್ತಾಪವಾಗಲಿ, ಆಗ ಚರ್ಚೆ ಮಾಡೋಣ” ಎಂದು ಹೇಳಿದರು.


ಮೈಕ್ರೋ ಫೈನಾನ್ಸ್ ಹಾವಳಿಗಳ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಈ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು, ಕಂದಾಯ, ಗೃಹ, ಕಾನೂನು ಸಚಿವರು ಸೇರಿ ಚರ್ಚೆ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ನಾನು ಹಿಂದೆ ಅಧ್ಯಯನ ಮಾಡಿದ್ದೆ. ಕಾನೂನಾತ್ಮಕವಾಗಿ ಯಾವ ಕ್ರಮ ತೆಗೆದುಕೊಳ್ಳಬಹುದು ಎಂದು ನಾವು ಚರ್ಚೆ ಮಾಡುತ್ತೇವೆ. ಸದ್ಯದಲ್ಲಿಯೇ ಸರ್ಕಾರದ ನಿರ್ಧಾರ ತಿಳಿಸಲಾಗುವುದು. ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದರು.

2026 ಕ್ಕೆ ಫ್ರಾನ್ಸ್ ದೇಶದ ವೀಸಾ ಬೆಂಗಳೂರಿನಲ್ಲಿ ಲಭ್ಯ

ಫ್ರಾನ್ಸ್ ದೇಶದ ಕಾನ್ಸುಲೇಟ್ ಕಚೇರಿಯ ಅಧಿಕಾರಿಗಳು ನನ್ನ ಭೇಟಿ ಮಾಡಿ ಸಂತಸ ವ್ಯಕ್ತಪಡಿಸಿದರು. ಕರ್ನಾಟಕದಿಂದ ಉತ್ತಮ ಹೂಡಿಕೆದಾರರು ಬರುತ್ತಿದ್ದಾರೆ. ನಮ್ಮ ಹೂಡಿಕೆದಾರರು ಸಹ ಸಂತಸಗೊಂಡಿದ್ದಾರೆ. 2026 ರ ವೇಳೆಗೆ ಬೆಂಗಳೂರಿನಲ್ಲಿ ಫ್ರಾನ್ಸ್ ದೇಶಕ್ಕೆ ವೀಸಾ ನೀಡುವ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರದಿಂದಲೂ ಸಹಕಾರ ನೀಡುವುದಾಗಿ ತಿಳಿಸಿದ್ದೇವೆ. ಯಾವುದೇ ವಿಚಾರಕ್ಕೂ ಹಿಂಜರಿಕೆ ಮಾಡಿಕೊಳ್ಳಬೇಡಿ. ಕರ್ನಾಟಕದಲ್ಲಿ ಪ್ರಗತಿಪರವಾದ ಸರ್ಕಾರವಿದೆ. ನಿಮ್ಮ ಜೊತೆ ನಿಲ್ಲುತ್ತದೆ ಎಂದು ತಿಳಿಸಿದ್ದೇವೆ ಎಂದು ಹೇಳಿದರು.

Comentarios


bottom of page