ಸದನದಲ್ಲಿ ರಾಜ್ಯಸಭಾ ಅಧ್ಯಕ್ಷರ ವರ್ತನೆಯಿಂದ ದೇಶದ ಘನತೆಗೆ ಧಕ್ಕೆ: ಮಲ್ಲಿಕಾರ್ಜುನ ಖರ್ಗೆ
- new waves technology
- Dec 11, 2024
- 1 min read
ರಾಜ್ಯಸಭಾ ಅಧ್ಯಕ್ಷರ ಕಾರ್ಯವೈಖರಿ ಅವರ ಸ್ಥಾನದ ಘನತೆಗೆ ವ್ಯತಿರಿಕ್ತವಾಗಿದೆ... ಅವರು ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸಿಕೊಂಡು ಆಗಾಗ್ಗೆ ಸರ್ಕಾರವನ್ನು ಹೊಗಳುತ್ತಾರೆ.

ನವದೆಹಲಿ: ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ವಿರುದ್ಧ ಬುಧವಾರ ಮತ್ತಷ್ಟು ವಾಗ್ದಾಳಿ ನಡೆಸಿದ ಪ್ರತಿಪಕ್ಷಗಳು, ಮೇಲ್ಮನೆಯಲ್ಲಿ "ಅಡೆತಡೆಗಳಿಗೆ ಅವರೇ ದೊಡ್ಡ ಕಾರಣ" ಎಂದು ಆರೋಪಿಸಿವೆ.
ರಾಜ್ಯಸಭಾ ಅಧ್ಯಕ್ಷರ ಕಾರ್ಯವೈಖರಿ ಅವರ ಸ್ಥಾನದ ಘನತೆಗೆ ವ್ಯತಿರಿಕ್ತವಾಗಿದೆ... ಅವರು ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸಿಕೊಂಡು ಆಗಾಗ್ಗೆ ಸರ್ಕಾರವನ್ನು ಹೊಗಳುತ್ತಾರೆ. ಅವರು ಸರ್ಕಾರದ ವಕ್ತಾರರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
ಇಂದು ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಧಂಖರ್ ಅವರ ಕಾರ್ಯವೈಖರಿಯಿಂದಾಗಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದನ್ನು ಬಿಟ್ಟು ಪ್ರತಿಪಕ್ಷಗಳಿಗೆ ಬೇರೆ ಆಯ್ಕೆ ಇರಲಿಲ್ಲ ಎಂದರು.
“ರಾಜ್ಯಸಭಾ ಅಧ್ಯಕ್ಷ ವಿರುದ್ಧ ನಮಗೆ ಯಾವುದೇ ವೈಯಕ್ತಿಕ ದ್ವೇಷ ಅಥವಾ ರಾಜಕೀಯ ಜಗಳವಿಲ್ಲ. ಪ್ರಜಾಪ್ರಭುತ್ವ, ಸಂವಿಧಾನವನ್ನು ರಕ್ಷಿಸಲು ನಾವು ಈ ಕ್ರಮ ಕೈಗೊಂಡಿದ್ದೇವೆ. ಸಾಕಷ್ಟು ಯೋಚಿಸಿದ ನಂತರ ಅವರ ಪದಚ್ಯುತಿಗೆ ನೋಟಿಸ್ ಸಲ್ಲಿಸುವುದು ಬಿಟ್ಟು ನಮಗೆ ಬೇರೆ ಆಯ್ಕೆ ಇರಲಿಲ್ಲ ಎಂದು ಖರ್ಗೆ ಹೇಳಿದರು.
"ನಾವು ಅವರ ನಡವಳಿಕೆ, ಪಕ್ಷಪಾತದಿಂದ ಬೇಸರಗೊಂಡಿದ್ದೇವೆ. ಸದನದಲ್ಲಿ ಸಭಾಪತಿಯವರ ನಡವಳಿಕೆಯು ದೇಶದ ಘನತೆಗೆ ಧಕ್ಕೆ ತಂದಿದೆ. ಅವರು ರಾಜ್ಯಸಭೆಯ ನಿಯಮಗಳಿಗಿಂತ ರಾಜಕೀಯಕ್ಕೆ ಆದ್ಯತೆ ನೀಡಿದ್ದಾರೆ ಎಂದು ದೂರಿದರು.
1952 ರಿಂದ ಉಪರಾಷ್ಟ್ರಪತಿಯನ್ನು ಪದಚ್ಯುತಗೊಳಿಸುವ ಯಾವುದೇ ನಿರ್ಣಯವನ್ನು ತಂದಿಲ್ಲ. ಏಕೆಂದರೆ, ಆ ಸ್ಥಾನವನ್ನು ಹೊಂದಿರುವವರು ‘ನಿಷ್ಪಕ್ಷಪಾತ ಮತ್ತು ರಾಜಕೀಯವನ್ನು ಮೀರಿದವರು. ಯಾವಾಗಲೂ ನಿಯಮಗಳ ಪ್ರಕಾರ ಸದನವನ್ನು ನಡೆಸುತ್ತಿದ್ದರು. ಆದರೆ, ಇಂದು ಸದನದಲ್ಲಿ ನಿಯಮಕ್ಕಿಂತ ರಾಜಕೀಯವೇ ಹೆಚ್ಚಿದೆ’ ಎಂದು ಖರ್ಗೆ ಟೀಕಿಸಿದರು.
ಸಂಸತ್ತಿನಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದಿಂದ ದೇಶದ ಪ್ರಜಾಪ್ರಭುತ್ವದ ಮೇಲೆ ಘೋರ ದಾಳಿ ನಡೆಯುತ್ತಿದೆ ಎಂದು ಡಿಎಂಕೆ ನಾಯಕ ತಿರುಚಿ ಶಿವ ಹೇಳಿದರೆ, ತೃಣಮೂಲ ಕಾಂಗ್ರೆಸ್(ಟಿಎಂಸಿ) ನಾಯಕ ನದಿಮುಲ್ ಹಕ್ ಅವರು ವಿರೋಧ ಪಕ್ಷದ ನಾಯಕ ಖರ್ಗೆ ಅವರ ಮಾತಿಗೆ ನನ್ನ ಸಹಮತ ಇದೆ. ರಾಜ್ಯಸಭೆಯಲ್ಲಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು ನಮಗೆ ಅವಕಾಶವಿಲ್ಲ ಎಂದರು.
Commentaires