Bengaluru: ನಗರದಲ್ಲಿ 4 ವರ್ಷಗಳಲ್ಲಿ 9,450 ಮಂದಿ ಆತ್ಮಹತ್ಯೆ
- new waves technology
- Jan 6
- 1 min read

ಬೆಂಗಳೂರು: ಕೌಟುಂಬಿಕ ಕಲಹ, ಆರ್ಥಿಕ ಸಂಕಷ್ಟ, ನಿರುದ್ಯೋಗ ಸೇರಿ ವಿವಿಧ ಕಾರಣಗಳಿಗೆ ನಗರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 9,450 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿ ದಿನ ಸರಾಸರಿ ಆರರಿಂದ ಏಳು ಜನರು ಆತ್ಮಹತ್ಯೆಯ ಮೂಲಕ ಕೊನೆಯುಸಿರೆಳೆಯುತ್ತಿದ್ದಾರೆ.
ಮಾನಸಿಕ ಅನಾರೋಗ್ಯ ಸಮಸ್ಯೆಗಳು ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಕಾರಣವಾಗುತ್ತಿವೆ. ಗೃಹ ಇಲಾಖೆಯ ಮಾಹಿತಿ ಪ್ರಕಾರ, ನಗರದಲ್ಲಿ ಪ್ರತಿ ವರ್ಷ ಎರಡು ಸಾವಿರಕ್ಕೂ ಅಧಿಕ ಮಂದಿ ಆತ್ಮಹತ್ಯೆಯಿಂದ ಮೃತಪಡುತ್ತಿದ್ದಾರೆ. ಕಟ್ಟಡದಿಂದ ಜಿಗಿದು, ನೇಣು ಬಿಗಿದುಕೊಂಡು, ವಿಷ ಸೇವಿಸಿ, ರೈಲ್ವೆ ಹಳಿಗೆ ಹಾರಿ, ಗುಂಡು ಹಾರಿಸಿಕೊಂಡು ಸೇರಿ ವಿವಿಧ ವಿಧಾನಗಳ ಮೂಲಕ ಆತ್ಮಹತ್ಯೆ ಪ್ರಯತ್ನ ಮಾಡುತ್ತಿದ್ದು, ಈ ರೀತಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವವರಲ್ಲಿ ಹೆಚ್ಚಿನವರು ಯುವಜನರೇ ಆಗಿದ್ದಾರೆ.
2022ರ ಜನವರಿಯಿಂದ 2025ರ ನವೆಂಬರ್ವರೆಗೆ ಆತ್ಮಹತ್ಯೆ ಮಾಡಿಕೊಂಡ 9,450 ಮಂದಿಯಲ್ಲಿ, 8,148 ಮಂದಿ ಆತ್ಮಹತ್ಯೆಗೆ ನೇಣು ಬಿಗಿದುಕೊಳ್ಳುವ ವಿಧಾನ ಅನುಸರಿಸಿದ್ದಾರೆ. 740 ಜನರು ವಿಷ ಸೇವಿಸಿ ಮೃತಪಟ್ಟರೆ, 204 ಜನರು ಕಟ್ಟಡಗಳು ಮತ್ತು ಇತರ ಎತ್ತರದ ಸ್ಥಳಗಳಿಂದ ಹಾರಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಮನೋವ್ಯಾಧಿ:
ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ವಿಶ್ಲೇಷಣೆ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಮೂರನೇ ಒಂದರಷ್ಟು ಮಂದಿ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಉಳಿದ ಎರಡು ಭಾಗದಷ್ಟು ಮಂದಿ ಆರ್ಥಿಕ ಸಮಸ್ಯೆ ಹಾಗೂ ಕುಟುಂಬದ ಬಾಂಧವ್ಯ ಕಡಿದುಕೊಳ್ಳುವಿಕೆಯಿಂದ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ಮಾನಸಿಕ ಅನಾರೋಗ್ಯ ಸಮಸ್ಯೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ನಿಮ್ಹಾನ್ಸ್ ಪ್ರಾರಂಭಿಸಿರುವ 'ಟೆಲಿ ಮನಸ್' ಸಹಾಯವಾಣಿಗೆ (14416) ಪ್ರತಿನಿತ್ಯ ಸಾವಿರಾರು ದೂರವಾಣಿ ಕರೆಗಳು ಬರುತ್ತಿದ್ದು, ಆತ್ಮಹತ್ಯೆಯ ಆಲೋಚನೆ ಮಾಡುತ್ತಿರುವವರೂ ಈ ಸಹಾಯವಾಣಿ ಮೂಲಕ ಸಮಾಲೋಚನೆಗೆ ಒಳಪಡುತ್ತಿದ್ದಾರೆ.
'ಭಾವನಾತ್ಮಕವಾಗಿ ತೀವ್ರ ಘಾಸಿಗೊಳ್ಳುವಿಕೆ ಮತ್ತು ವಿವಿಧ ಸಮಸ್ಯೆಗಳು ಆತ್ಮಹತ್ಯೆಗೆ ದಾರಿ ಮಾಡಿಕೊಡುತ್ತಿವೆ. ಮನೋಸಾಮಾಜಿಕ ಸಮಸ್ಯೆಗಳು ಆತ್ಮಹತ್ಯೆಗೆ ಕಾರಣವಾಗುತ್ತಿವೆ. ಹಿಂದೆ ಆತ್ಮಹತ್ಯೆಗೆ ಸಹಕಾರಿಯಾದ ಕೀಟನಾಶಕಗಳು ಸೇರಿ ವಿವಿಧ ಸಾಧನಗಳು ಸುಲಭವಾಗಿ ದೊರೆಯುತ್ತಿರಲಿಲ್ಲ' ಎಂದು ಮನೋವೈದ್ಯಕೀಯ ತಜ್ಞ ಡಾ. ರವೀಶ್ ಬಿ.ಎನ್. ವಿವರಿಸಿದರು.










Comments