top of page

ಸಂಸತ್‌ನಲ್ಲಿ ಮತ್ತೆ ಗದ್ದಲ: ವಿರೋಧ ಪಕ್ಷದ 8 ಸಂಸದರ ಅಮಾನತು

  • Writer: new waves technology
    new waves technology
  • 21 hours ago
  • 1 min read

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರಿಗೆ ರಾಷ್ಟ್ರಪತಿ ಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಲು ಅವಕಾಶ ನಿರಾಕರಿಸಿದ್ದು ಮತ್ತು ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ವಿಚಾರವು ಲೋಕಸಭೆಯಲ್ಲಿ ಮಂಗಳವಾರ ತೀವ್ರ ಗದ್ದಲಕ್ಕೆ ಕಾರಣವಾಯಿತು.

ಪರಿಣಾಮವಾಗಿ, ಕಲಾಪವು ಹಲವು ಬಾರಿ ಮುಂದೂಡಿಕೆಯಾಯಿತು. ಅಶಿಸ್ತಿನ ವರ್ತನೆಯ ಆರೋಪದ ಮೇಲೆ ಕಾಂಗ್ರೆಸ್‌ನ ಏಳು ಮತ್ತು ಸಿಪಿಎಂನ ಒಬ್ಬರು ಸಂಸದರನ್ನು ಅಮಾನತು ಮಾಡಲಾಯಿತು.

ದಿನದ ಆರಂಭದಲ್ಲಿ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ವಿಚಾರವಾಗಿ ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸಿದ ಕಾರಣ ಕಲಾಪವನ್ನು ಪದೇ ಪದೇ ಮುಂದೂಡಲಾಯಿತು. ಮಧ್ಯಾಹ್ನದ ಬಳಿಕ ರಾಹುಲ್ ಗಾಂಧಿ ಅವರು, ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರ ಅಪ್ರಕಟಿತ 'ಆತ್ಮಚರಿತ್ರೆ'ಯ ಅಂಶಗಳ ಕುರಿತು ನಿಯತಕಾಲಿಕವೊಂದರಲ್ಲಿ ಪ್ರಕಟವಾಗಿರುವ ಲೇಖನದ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಲು ಮುಂದಾದಾಗ ಮತ್ತೆ ಗದ್ದಲ ಏರ್ಪಟ್ಟಿತು. ರಾಹುಲ್ ಅವರಿಗೆ ಮಾತನಾಡಲು ಅವಕಾಶ ನಿರಾಕರಿಸಿದ್ದನ್ನು ಪ್ರಶ್ನಿಸಿ ಹಲವು ಸಂಸದರು ಪ್ರತಿಭಟಿಸಿದರು.

ಕೆಲವರು ಕಾಗದ ಪತ್ರಗಳನ್ನು ಹರಿದುಹಾಕಿ, ಅದನ್ನು ಸಭಾಪತಿ ಪೀಠದತ್ತ ಎಸೆದರು. ಈ ರೀತಿ ಅಶಿಸ್ತಿನ ವರ್ತನೆ ತೋರಿದ ಕಾರಣಕ್ಕಾಗಿ ಸಭಾಪತಿ ಪೀಠದಲ್ಲಿದ್ದ ದಿಲೀಪ್ ಸೈಕಿಯಾ ಅವರು ಎಂಟು ಸಂಸದರನ್ನು ಅಮಾನತು ಮಾಡಿದರು.

ಕಾಂಗ್ರೆಸ್‌ನ ಮಾಣಿಕ್ಯಂ ಠಾಗೋರ್, ಹಿಬಿ ಈಡನ್, ಡೀನ್ ಕುರಿಯಾಕೋಸ್, ಅಮರಿಂದರ್ ಸಿಂಗ್ ರಾಜಾ, ಪ್ರಶಾಂತ್ ಪಡೋಲೆ, ಸಿ.ಕಿರಣ್ ಕುಮಾರ್ ರೆಡ್ಡಿ, ಗುರ್ಜೀತ್ ಸಿಂಗ್ ಔಜಲಾ ಮತ್ತು ಸಿಪಿಎಂನ ಸು. ವೆಂಕಟೇಶನ್ ಅಮಾನತುಗೊಂಡವರು. ಇವರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸುವ ನಿರ್ಣಯವನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಓದಿದರು. ನಂತರ ಸದನವು ಧ್ವನಿಮತದ ಮೂಲಕ ಅಂಗೀಕರಿಸಿತು. ಈ ಬೆಳವಣಿಗೆಯ ನಂತರ, ದಿನದ ಮಟ್ಟಿಗೆ ಕಲಾಪವನ್ನು ಮುಂದೂಡಲಾಯಿತು. ಬಜೆಟ್ ಅಧಿವೇಶನವು ಏಪ್ರಿಲ್ 2ರವರೆಗೆ ನಡೆಯಲಿದ್ದು, ಅಲ್ಲಿಯ ತನಕ ಈ ಸಂಸದರನ್ನು ಅಮಾನತುಗೊಳಿಸಲಾಗಿದೆ.

ರಾಹುಲ್ ನೇತೃತ್ವದಲ್ಲಿ ಪ್ರತಿಭಟನೆ

ಸಂಸದರನ್ನು ಅಮಾನತುಗೊಳಿಸಿದ್ದನ್ನು ಖಂಡಿಸಿ ರಾಹುಲ್ ಗಾಂಧಿ ಅವರು ಸಂಸತ್‌ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದರು.

'ನರವಣೆ, ಎಪ್‌ಸ್ಟೈನ್ ಕಡತಗಳು ಮತ್ತು ಸುಂಕಕ್ಕೆ ಮೋದಿ ಶರಣಾಗಿದ್ದು ಹೇಗೆ ಎಂಬ ಬಗ್ಗೆ ಸಂಸತ್ತಿನಲ್ಲಿ ನನಗೆ ಮಾತನಾಡಲು ಅವಕಾಶ ನೀಡಲು ಪ್ರಧಾನಿ ನರೇಂದ್ರ ಮೋದಿ ಹೆದರುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.

Comments


bottom of page