ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿದ್ರೆ ಕೇರ್ ಮಾಡಬೇಡಿ: ಲಾಬಿಗಳಿಗೆ ಮಣಿಯಬೇಡಿ- ಡಿಕೆಶಿಗೆ ಹೈಕಮಾಂಡ್ ಖಡಕ್ ವಾರ್ನಿಂಗ್
- new waves technology
- 2 hours ago
- 2 min read

ಬೆಂಗಳೂರು: ಜುಲೈ ಮೊದಲ ವಾರದಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಸಮಯದಲ್ಲಿ ಸಂಪುಟಕ್ಕೆ ಸೇರ್ಪಡೆಗೊಳ್ಳಲು ಆಕಾಂಕ್ಷಿಯಾಗಿರುವ 60 ಕ್ಕೂ ಹೆಚ್ಚು ಶಾಸಕರಿಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ ಎಂದು ಹೇಳಲಾಗಿದೆ.
ಸಿಎಂ ಡಿ.ಕೆ ಶಿವಕುಮಾರ್ ಅವರ ಸಂಪುಟದಲ್ಲಿ 20 ಸಚಿವ ಸ್ಥಾನಗಳು ಖಾಲಿ ಇವೆ. ಜೂನ್ 3 ರಂದು ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ 13 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಪಕ್ಷ ಮತ್ತು ರಾಜ್ಯ ಸರ್ಕಾರಕ್ಕೆ ಯಾವುದೇ ಮುಜುಗರವಾಗದಂತೆ ನೋಡಿಕೊಳ್ಳಲು, ಬುಧವಾರ ಕಾಂಗ್ರೆಸ್ ಹೈಕಮಾಂಡ್ ಶಿವಕುಮಾರ್ ಅವರಿಗೆ ಆಕಾಂಕ್ಷಿಗಳಿಂದ ಲಾಬಿ ಮಾಡುವ ಬಗ್ಗೆ ಸರಣಿ ಸೂಚನೆಗಳನ್ನು ನೀಡಿದೆ ಎಂದು ಬಲ್ಲ ಮೂಲವೊಂದು ದಿ ನ್ಯೂಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದೆ.
ಸಿಎಂ ಡಿಕೆ ಶಿವಕುಮಾರ್ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಸೂಚನೆಗಳನ್ನು ನೀಡಿದವರು ಯಾರು ಎಂಬುದನ್ನು ಮೂಲಗಳು ದೃಢಪಡಿಸಿಲ್ಲ. ಇತ್ತೀಚಿನ ದಿನಗಳಲ್ಲಿ, ತಮ್ಮ ನಾಯಕರಿಗೆ ಕ್ಯಾಬಿನೆಟ್ ಹುದ್ದೆಗಳನ್ನು ಕೋರಿ ಬೆಂಬಲಿಗರ ಪ್ರತಿಭಟನೆ, ಧಾರ್ಮಿಕ ಮುಖಂಡರು ಮತ್ತು ಸ್ವಾಮೀಜಿಗಳ ಲಾಬಿ ಮತ್ತು ಹಲವಾರು ಸಭೆಗಳ ಬಗ್ಗೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿವೆ, ಇದು ಪಕ್ಷವನ್ನು ಮುಜುಗರಕ್ಕೀಡು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಸೂಕ್ತ ಸಮಯದಲ್ಲಿ ವಿಸ್ತರಣೆಯ ಬಗ್ಗೆ ಕಾಂಗ್ರೆಸ್ ವರಿಷ್ಠರು ನಿರ್ಧರಿಸುತ್ತಾರೆ, ಸಚಿವ ಸ್ಥಾನಗಳಿಗಾಗಿ ಲಾಬಿ ಮಾಡುವವರನ್ನು ಪಕ್ಷ ಸಹಿಸುವುದಿಲ್ಲ. ಈ ವಿಷಯದಲ್ಲಿ ಯಾವುದೇ ರೀತಿಯ ಅನಗತ್ಯ ಬೆಳವಣಿಗೆಗಳನ್ನು ಪಕ್ಷವು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಬ್ಯಾಚ್ಗಳಲ್ಲಿ ಬರುವ ನಾಯಕರು, ಶಾಸಕರು ಮತ್ತು ಎಂಎಲ್ಸಿಗಳ ಗುಂಪುಗಳನ್ನು ಸ್ವಾಗತಿಸಬೇಡಿ ಎಂದು ಮುಖ್ಯಮಂತ್ರಿಗೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. "ಮಾಜಿ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ ಮತ್ತು ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರಲು ತಮ್ಮ ಬೆಂಬಲಿಗರಿಂದ ಪ್ರತಿಭಟನೆಗಳನ್ನು ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಇದು ಇತರರನ್ನು ಸಹ ಪ್ರತಿಭಟಿಸಲು ಪ್ರೇರೇಪಿಸಿತು ಮತ್ತು ಇದು ಸಾಮೂಹಿಕ ಉನ್ಮಾದಕ್ಕೆ ಕಾರಣವಾಯಿತು. ರೋಣ ಶಾಸಕ ಜಿ.ಎಸ್. ಪಾಟೀಲ್ ಅವರ ಬೆಂಬಲಿಗರು ಸಿದ್ದಗಂಗಾ ಮಠದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿದ್ದರು, ಅವರನ್ನು ನೆಲಮಂಗಲದಲ್ಲಿ ತಡೆಯಲಾಯಿತು. ಅವರು ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಸೇರಿದರು, ನಂತರ ಶಿವಕುಮಾರ್ ಅವರನ್ನು ಉದ್ದೇಶಿಸಿ ಮಾತನಾಡಿದರು.
ಇಂಡಿ ಶಾಸಕ ಯಶವಂತ ರಾಯಗೌಡ ಪಾಟೀಲ್ ಅವರ ಬೆಂಬಲಿಗರು ಸಿಎಂ ನಿವಾಸದ ಹೊರಗೆ ಪ್ರತಿಭಟನೆಯನ್ನೂ ನಡೆಸಿದ್ದರು," ಎಂದು ಪಕ್ಷದ ಒಳಗಿನವರು ಟಿಎನ್ಐಇಗೆ ತಿಳಿಸಿದ್ದಾರೆ.ಇತ್ತೀಚೆಗೆ, 200 ಕ್ಕೂ ಹೆಚ್ಚು ದರ್ಗಾಗಳ ಧಾರ್ಮಿಕ ಮುಖಂಡರು ಶಿವಕುಮಾರ್ ಅವರನ್ನು ಭೇಟಿ ಮಾಡಿ, ಕಿತ್ತೂರು ಕರ್ನಾಟಕ ಪ್ರದೇಶದವರಾದ ಎಂಎಲ್ಸಿ ಸಲೀಮ್ ಅಹ್ಮದ್ ಅವರನ್ನು ಸಚಿವರನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು.
ಮಾಜಿ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ ಮತ್ತು ಕೆ. ವೆಂಕಟೇಶ್, ಶಾಸಕರಾದ ಹಂಪನಗೌಡ ಬಾದರ್ಲಿ ಮತ್ತು ಎ.ಎಸ್. ಪೊನ್ನಣ್ಣ ಅವರು ಸಿದ್ದರಾಮಯ್ಯ ಅವರೊಂದಿಗೆ ಕೊಚ್ಚಿಗೆ ಹೋಗಿದ್ದಾರೆ, ಅಲ್ಲಿ ಅವರು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಸೇರಿದ ರೆಸಾರ್ಟ್ನಲ್ಲಿ ತಂಗಿದ್ದಾರೆ.
ಸಿದ್ದರಾಮಯ್ಯ ಪಾಳಯವು ತಮ್ಮ ಹೆಚ್ಚಿನ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರದ ಬಗ್ಗೆ ಚರ್ಚಿಸಿರಬಹುದು ಎಂದು ಮೂಲಗಳು ತಿಳಿಸಿವೆ.
ಆದರೆ ಇತ್ತೀಚಿನ ಎಂಎಲ್ಸಿ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿ ಮೊದಲ ಚುನಾವಣಾ ಯಶಸ್ಸನ್ನು ಕಂಡ ಶಿವಕುಮಾರ್, ಸಂಪುಟ ವಿಸ್ತರಣೆಯಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆಯಿದೆ.





Comments